ಭಾವಪೂರ್ಣ ಶ್ರದ್ಧಾಂಜಲಿ .... ಸಲ್ಲಿಸುವ ಮುನ್ನ...
ಇದು ನಮ್ಮ ಭಾರತದಲ್ಲಿರುವ ಆಧುನಿಕ ಸಂಪ್ರದಾಯ. ವಿದೇಶದಿಂದ ಬಂದ ಯುದ್ಧವಿಮಾನಗಳನ್ನು, ಎತ್ತರದ ಪ್ರತಿಮೆಗಳನ್ನು, ಸಿನಿಮಾಗಳನ್ನೂ ಕಂಡು ಸಂಭ್ರಮಿಸುವ ನಾವು ನಮ್ಮಲ್ಲೇ ಸಾಮಾಜಿಕ, ಆರ್ಥಿಕತೆ, ಕೌಟುಂಬಿಕ ತೊಂದರೆಗಳಿಂದ ನೊಂದ ಈ ಸಣ್ಣ ಸವಿ ಹೃದಯಗಳ ಜೀವನ ನಡೆಸಲು ಅನುವು ಮಾಡಿಕೊಡಲಿಲ್ಲವೇಕೆ. ಇವರದ್ದೂ (ನಮ್ಮದೂ) ಒಂದು ಜೀವ, ಜೀವನವಿದೆ ಎಂದು ಅನಿಸಲಿಲ್ಲವೇಕೆ? ಒಪ್ಪಿಕೊಳ್ಳಲಿಲ್ಲವೇಕೆ? ಎಲ್ಲದಕ್ಕೂ ಸಂಪ್ರದಾಯ, ಸಹಿಷ್ಣುತೆ, ಆಧುನಿಕತೆ, ಡಿಜಿಟಲ್ ಎಂದು ಒಪ್ಪಿಕೊಳ್ಳುವ ನಾವು ಒಂದು ಸಹ ಸಾಂಗತ್ಯ ಒಪ್ಪಿಕೊಳ್ಳುವ ಬಾಧ್ಯತೆ ನಮ್ಮಲ್ಲಿ, ನಮ್ಮ ಸಮಾಜದಲ್ಲಿ ಇಲ್ಲವೇ ?
ಇಲ್ಲಿ ತಮ್ಮ ತಮ್ಮ ಸ್ವಾರ್ಥಕ್ಕೆ ಜೀವನ ನಡೆಸುವ ಜನಗಳೇ ಇದ್ದಾರೆ. ಸಲಿಂಗ ಪ್ರೇಮವನ್ನ ಪ್ರೇಮವೆಂದು ಕಾಣದೆ ತುಚ್ಛವಾಗಿ ಕಾಣುವ ಜನಗಳೇ ಹೆಚ್ಚು.
ಇದರಲ್ಲಿ ಇವರದ್ದು ತಪ್ಪಿದೆ. ಒಂದು ಕ್ಷಣ ಎಚ್ಚರ ತಪ್ಪಿ ಅನಾಹುತ ಮಾಡಿಕೊಂಡಿದ್ದಾರೆ. ಒಮ್ಮೆ ಯೋಚಿಸಬೇಕಿತ್ತು. ಕೆಲವು ಸಂಘ ಸಂಸ್ಥೆ ಸಹಾಯ ಕೇಳಬೇಕಿತ್ತು. ಮತ್ತು ಧೈರ್ಯ ಮಾಡಿ ಎದುರಿಸುವ ಶಕ್ತಿ ಇನ್ನು ಬೇಕಿತ್ತು. ಆರ್ಥಿಕವಾಗಿ ಬಲಗೊಳ್ಳಬೇಕಿತ್ತು. ಬರಿ ಪ್ರೀತಿ ಕಾಮವೇ ಹೆಚ್ಚು ಅಂದುಕೊಂಡಿರಬಹುದು. ಅದು ಬಿಟ್ಟು ಜೀವನವೂ ಹೆಚ್ಚಿದೆ ಎಂದು ಈ ಮುಗ್ಧ ಹೃದಯಗಳಿಗೆ ಅರ್ಥವಾಗಲಿಲ್ಲವೇಕೆ?
ಇನ್ನು ಮುಂದೆಯಾದರೂ ಸಲಿಂಗ ಪ್ರೇಮಿಗಳೇ ಮೊದಲು ಪ್ರೇಮ ಕಾಮ ಬದಿಗಿಟ್ಟು ಆರ್ಥಿಕವಾಗಿ ಬಲಶಾಲಿಯಾಗಿ, ಹಾಗೆ ಆದಲ್ಲಿ ನಿಮ್ಮ ಜೀವನವನ್ನ ನೀವಂದುಕೊಂಡಂತೆ ಜೀವಿಸಬಹುದು. ಹಾಗೆ ನಿಮ್ಮ ನಿಮ್ಮ ಕುಟುಂಬದಲ್ಲಿ ಕುಳಿತು ಸಂವಾದ ನಡೆಸಿ. ಚರ್ಚೆ ಮಾಡಿ.. ಇಲ್ಲವಾದಲ್ಲಿ ನಿಮ್ಮ ಕುಟುಂಬದಿಂದ ದೂರ ಉಳಿದು ಜೀವನ ಮಾಡಬೇಕೆಂದು ತೀರ್ಮಾನಿಸಿದರೆ, ಆರ್ಥಿಕ ಬೆನ್ನೆಲುಬು ಶಕ್ತಿಯಾಗಿರಬೇಕು. ಜೀವನ ಮುಖ್ಯ... ಜೀವತೆತ್ತರೆ ಮತ್ತೊಮ್ಮೆ ಯಾವ ರೀತಿಯಾಗಿ ಜೀವಿಯಾಗಿಯೂ ಹುಟ್ಟಿಬಂದು ಇದೆ ರೀತಿಯ ಜೀವನ ಸಾಗಿಸಲು ಸಾಧ್ಯವಿಲ್ಲ.. ಇರುವ ಜೀವನವನ್ನ ನೆಮ್ಮದಿಯಾಗಿ ಜೀವಿಸಲು ದಾರಿ ನೋಡಿ. ಧೈರ್ಯವಾಗಿರಿ, ಮೋಸಹೋಗಬೇಡಿ...